ಸ್ನೇಹಿತರೆ 03-06-2025, ಈ ದಿನಾಂಕವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಗಳು ಮರೆಯೋದಕ್ಕೆ ಸಾಧ್ಯವೇ ಇಲ್ಲ. 18 ವರ್ಷಗಳ ನಂತರ ಆರ್ಸಿಬಿ ತಂಡ ಐಪಿಎಲ್ ಕಿರೀಟವನ್ನು ಮುಡಿಗೇರಿಸಿಕೊಂಡಿತ್ತು. ಎಂತಹ ಸಂಭ್ರಮದ ದಿನ? ದೇಶದಾದ್ಯಂತ ಈ ದಿನವನ್ನು ಅಭಿಮಾನಿಗಳು ದೀಪಾವಳಿ ಹಬ್ಬದ ಹಾಗೆ ಆಚರಿಸಿದರು. ಇಷ್ಟೇ ಅಲ್ಲದೆ ವಿದೇಶಗಳಲ್ಲೂ ಕೂಡ ಈ ಸಂಭ್ರಮವನ್ನು ಆಚರಿಸಲಾಯಿತು. ದಿನಾಂಕ 04-06-2025, ತಮ್ಮ ಗೆಲುವನ್ನು ಬೆಂಗಳೂರಿನ ಅಭಿಮಾನಿಗಳ ಜೊತೆಗೆ ಆಚರಿಸಲು ಮುಂದಾಗಿದ್ದರು ಆರ್ಸಿಬಿ ತಂಡದವರು. ಆದರೆ ತಾನೊಂದು ಬಗೆದರೆ ದೈವವೊಂದು ಬಗೆದಿತ್ತು ಎಂಬ ಹಾಗೆ, ವಿಧಿಯ ಆಟ ಬೇರೆಯೇ ಆಗಿತ್ತು E ಆ ಥರಾ ಏನಿಲ್ಲ , ಒಂದಷ್ಟು ಜನರ ಮೂರ್ಖತನ, ಒಂದಷ್ಟು ಜನರ ಶೋ ಆಫ್ ಮಾಡೋ ದುರಾಸೆ.ಅವಸರಗೇಡಿತನ ಎಲ್ಲ ಸೇರ್ಕೊಂಡು 11 ಜನ ಬಲಿಯಾದ್ರು.
ನಿನ್ನೆ… ತಮ್ಮ ನೆಚ್ಚಿನ ಆಟಗಾರರನ್ನು ಕಣ್ಣು ತುಂಬಿಕೊಳ್ಳಬೇಕು, ಎಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಬಂದಿದ್ದ ಜನರ ನಡುವೆ ಕಾಲ್ತುಳಿತ ಉಂಟಾಗಿ, ಬರೋಬ್ಬರಿ 11 ಜನರು ಸಾವನ್ನಪ್ಪಿದ್ದರೆ, 50ಕ್ಕೂ ಹೆಚ್ಚು ಜನರು ಗಂಭೀರ ಗಾಯಗಳಿಂದ ಬಳಲುತ್ತಿದ್ದಾರೆ. ಒಂದು ವಿಶಾದನೀಯ ಸಂಗತಿ ಎಂದರೆ, ಈ ಕಾಲ್ತುಳಿತದಲ್ಲಿ ಒಂದು ಒಂಬತ್ತು ವರ್ಷದ ಹುಡುಗ ಕೂಡಾ ಮೃತ ಪಡುತ್ತಾನೆ. ಸಂಭ್ರಮದ ದಿನ ಆಗಬೇಕಿದ್ದದ್ದು ಶೋಕದ ದಿನ ಆಗಿತ್ತು. ಹಾಗಾದರೆ ಈ ದುರ್ಘಟನೆ ಸಂಭವಿಸಿದ್ದು ಹೇಗೆ? ಯಾರು ಇದಕ್ಕೆ ಜವಾಬ್ದಾರಿ? ಐಪಿಎಲ್ ನ ನಿಜವಾದ ಮುಖ ಏನು? ಹುಚ್ಚು ಅಭಿಮಾನಕ್ಕೆ ದಾರಿ ಮಾಡಿಕೊಟ್ಟಿದ್ದು ಯಾವುದು? ಹಾಗೆಯೇ ಐಪಿಎಲ್ ಮೂಲಕ ಜನಕ್ಕೇನು ಸಿಗುತ್ತದೆ ಹಾಗೂ ಬಿಸಿಸಿಐ ಗೆ ಏನು ಸಿಗುತ್ತದೆ? ಬನ್ನಿ ಎಲ್ಲವನ್ನೂ ತಿಳಿಯೋಣ.
ಹಾಗಾದರೆ ಆವತ್ತು ಆಗಿದ್ದು ಏನು?!
ಜೂನ್ 3ರಂದು ಕಪ್ ಗೆದ್ದ ಸಂಧರ್ಭದಲ್ಲಿ ಎಲ್ಲೆಡೆ ಹರ್ಷೋದ್ಗಾರ ಮುಗಿಲು ಮುಟ್ಟಿತ್ತು. ಈ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಅವರು ಎಸ್ಟೊಂದು ಭಾವುಕರಾಗಿ ಇದ್ದರು ಅಂತಾ ತಾವೂ ನೋಡಿದ್ದೀರಿ. ಅಲ್ಲಿಗಾಗಲೇ ಇಡೀ ದೇಶದಲ್ಲಿ ಪಟಾಕಿ ಸದ್ದು ಜೋರಾಗಿತ್ತು, ಬೆಂಗಳೂರಿನಲ್ಲಿ ಅಂತೂ ನೋಡೋದೆ ಬೇಡ. ಈ ಸಂದರ್ಭದಲ್ಲಿ ಆಸ್ಟ್ರೇಲಿಯಾ ಮಾಜಿ ಕ್ರಿಕೆಟಿಗ ಮ್ಯಾಥ್ಯೂ ಹೇಡನ್ ವಿರಾಟ್ ಕೊಹ್ಲಿ ಅವರಿಗೆ ಒಂದು ಸಣ್ಣ ಇಂಟರ್ವ್ಯೂ ಮಾಡ್ತಾರೆ. ಈ ಇಂಟರ್ವ್ಯೂ ಕೊನೆಯಲ್ಲಿ ಕೋಹ್ಲಿ ಬೆಂಗಳೂರಿನ ಅಭಿಮಾನಿಗಳ ಜೊತೆಗೆ ಈ ಸಂಭ್ರಮವನ್ನು ಆಚರಿಸಿಕೊಳ್ಳಲು ನಾಳೆ ಅಂದ್ರೆ ದಿನಾಂಕ 4ಕ್ಕೆ ಬೆಂಗಳೂರಿಗೆ ಬರ್ತೀವಿ ಅಂತಾ ಒಂದು ಸ್ಟೇಟ್ಮೆಂಟ್ ಕೊಡ್ತಾರೆ. ಇದು ಇಂಟರ್ನೆಟ್ ಅಲ್ಲಿ ಮಿಂಚಿನಂತೆ ಹರಿದಾಡಿತ್ತು. ಇದು ಯಾವುದೇ ತಪ್ಪಾದ ಹೇಳಿಕೆ ಅಲ್ಲ. ಗೆದ್ದ ಮೇಲೆ, ಅದು ಕೂಡ 18 ವರ್ಷಗಳ ನಂತರ ಟ್ರೋಫಿ ಗೆದ್ದ ಮೇಲೆ ಅಭಿಮಾನಿಗಳೊಂದಿಗೆ ಸಂಭ್ರಮ ಹಂಚಿಕೊಳ್ಳುವುದು ಒಂದು ಉತ್ತಮ ವಿಚಾರ. ಈ ಹೇಳಿಕೆ ಒಂದು ರೀತಿಯಲ್ಲಿ ವಿರಾಟ್ ಅವರಿಂದ ಬಂದ ಕರೆ ಆಗಿತ್ತು. ಬನ್ನಿ ಎಲ್ಲರೂ ಒಟ್ಟಿಗೆ ಸಂಭ್ರಮಿಸೋಣ ಎಂಬ ಒಂದು ಸಂತಸದ ಕರೆ ಆಗಿತ್ತು. ಆದರೆ ಇದು ಒಂದು disaster ಆಗುತ್ತೆ ಎಂಬುದು ಪಾಪ ವಿರಾಟ್ ಅವರಿಗೂ ಗೊತ್ತಿರಲಿಕ್ಕಿಲ್ಲ.
ಹಾಗಾದರೆ ಗೊಂದಲ ಆಗಿದ್ದು ಎಲ್ಲಿ?
ಈಗ ಸರ್ಕಾರ ಹಾಗೂ ಪೋಲಿಸ್ ಇಧಾಖೆಯತ್ತ ಬೆರಳು ಹೋಗುತ್ತದೆ. ಗೃಹ ಸಚಿವಾಲಯಕ್ಕೆ ಹಾಗೂ ಪೋಲಿಸ್ ಇಲಾಖೆಗೆ ಈ ವಿಷಯ ತಿಳಿದಿರಲಿಲ್ಲವಾ? ಯಾಕೆ ಎಂದರೆ ಅಂದು ರಾತ್ರಿ, ಅಂದ್ರೆ 03 ಜೂನ್ ರ ರಾತ್ರಿ ಯಾವ ರೀತಿಯಲ್ಲಿ ಸಂಭ್ರಮಾಚರಣೆ ಆಗಿತ್ತು ಎಂಬುದನ್ನು ಇಡೀ ಜಗತ್ತೇ ನೋಡಿದೆ, ಆವತ್ತೇ ಜನರನ್ನು ಕಂಟ್ರೋಲ್ ಮಾಡಲು ಪೋಲಿಸರು ಪರದಾಡಿದ್ದರು. ಹಾಗಿದ್ದ ಮೇಲೆ ಮಾರನೇ ದಿನ ತಂಡ ಬೆಂಗಳೂರಿಗೆ ಬರುತ್ತದೆ, ಇದು ಇನ್ನಷ್ಟು crowd ಆಗುತ್ತೆ, ಇದಕ್ಕೆ ಮೊದಲೇ ಪ್ರಿಪೇರ್ ಆಗಿರಬೇಕು ಎಂಬ ಒಂದು ಸಾಮಾನ್ಯ ಪ್ರಜ್ಞೆ, ಸರ್ಕಾರಕ್ಕೆ ಹಾಗೂ ಪೋಲಿಸ್ ಇಲಾಖೆಗೆ ಇರಲಿಲ್ಲವಾ? ಜನರಲ್ಲಿ ಗೊಂದಲ ಮೂಡಿಸಿದ ಹೇಳಿಕೆಗಳು ಕೂಡ ಸರ್ಕಾರದಿಂದ ಬಂದಿತ್ತು, ಯಾಕೆಂದರೆ, ಗೃಹ ಸಚಿವರಾದ ಜಿ. ಪರಮೇಶ್ವರ್, ವಿಧಾನಸೌಧದಲ್ಲಿ ಅಭಿನಂದನಾ ಸಮಾರಂಭ ಇರುತ್ತದೆಯೇ ಹೊರತು, ತಂಡದ ವಿಜಯೋತ್ಸವ ಮೆರವಣಿಗೆ ಅಥವಾ ತೆರೆದ ವಾಹನದಲ್ಲಿ ರೋಡ್ ಶೋ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಇದಕ್ಕೆ ಭದ್ರತಾ ಕಾರಣಗಳನ್ನು ಮತ್ತು ಟ್ರಾಫಿಕ್ ಸಮಸ್ಯೆಗಳನ್ನು ಉಲ್ಲೇಖಿಸಲಾಗಿತ್ತು. ಅವರು ಹೇಳಿದಂತೆ, ತಂಡವು ಬಸ್ಸಿನಲ್ಲಿ ವಿಧಾನಸೌಧಕ್ಕೆ ಬಂದು, ಅಲ್ಲಿ ಅಭಿನಂದನೆ ಸ್ವೀಕರಿಸಿ, ನಂತರ ಅದೇ ಬಸ್ಸಿನಲ್ಲಿ ಚಿನ್ನಸ್ವಾಮಿ ಸ್ಟೇಡಿಯಂಗೆ ಹೋಗುತ್ತದೆ ಎಂದು ತಿಳಿಸಿದ್ದರು. ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ (KSCA) ಸಹ ಭದ್ರತಾ ಕಾರಣಗಳಿಗಾಗಿ ತೆರೆದ ವಾಹನ ಮೆರವಣಿಗೆ “ಇಲ್ಲ” ಎಂದಿತ್ತು ಎಂದು ಹೇಳಿತ್ತು.
ಆದರೆ, ನಂತರ ಆರ್ಸಿಬಿ ತಂಡವೇ ಸ್ವತಃ “ವಿಕ್ಟರಿ ಪರೇಡ್” ಬಗ್ಗೆ ಘೋಷಣೆ ಮಾಡಿತ್ತು, ಇದರಿಂದ ಗೊಂದಲ ಉಂಟಾಯಿತು. ಇದರಿಂದ ಕಬ್ಬನ್ ಪಾರ್ಕ್ ಸುತ್ತ ಮುತ್ತಲಿನ ಪ್ರದೇಶ, ಮೆಟ್ರೋ ಸ್ಟೇಷನ್, ಹಾಗೂ ಚಿನ್ನಸ್ವಾಮಿ ಕ್ರೀಡಾಂಗಣ ಸಂಪೂರ್ಣ ಅವ್ಯವಸ್ಥಿತವಾಗ ಜನದಟ್ಟಣೆ ಉಂಟಾಯಿತು. ತದ ನಂತರ ಮತ್ತೆ, ಈ ಬಗ್ಗೆ ಪರಮೇಶ್ವರ್ ಅವರು ಮತ್ತೊಮ್ಮೆ ಸ್ಪಷ್ಟಪಡಿಸಿದ್ದು, ಭದ್ರತಾ ದೃಷ್ಟಿಯಿಂದ ಯಾವುದೇ ತೆರೆದ ವಾಹನದ ಮೆರವಣಿಗೆಗೆ ಅನುಮತಿ ಇಲ್ಲ ಎಂದು ಪುನರುಚ್ಚರಿಸಿದ್ದರು. ಆದರೆ, ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕೆಎಸ್ಸಿಎ ತಮ್ಮದೇ ಆದ ಕಾರ್ಯಕ್ರಮವನ್ನು ಆಯೋಜಿಸಿತ್ತು. ಇವೆಲ್ಲವೂ confusion ಗೆ ದಾರಿ ಮಾಡಿಕೊಡುತ್ತದೆ. ಹಾಗೂ ಒಂದು ವ್ಯವಸ್ಥಿತ crowd managementನ ಕೊರತೆ ಉಂಟಾಗಿ ಜನದಟ್ಟಣೆ ಉಂಟಾಯಿತು. ಇದರೊಂದಿಗೆ ಜನರನ್ನು ಕಂಟ್ರೋಲ್ ಮಾಡಲು ಪೋಲಿಸರು ಲಘು ಲಾಠಿ ಚಾರ್ಜ್ ಕೂಡ ಮಾಡ್ತಾರೆ. ಜೊತೆಗೆ ಯಾವ ಗೇಟ್ ನಿಂದ ಎಂಟ್ರಿ ಅನ್ನೋ ಗೊಂದಲ. ಗೇಟ್ ನಂ 7ರಲ್ಲಿ ಫ್ರೀ ಎಂಟ್ರಿ ಎಂಬ ವದಂತಿ. ಜೊತೆಗೆ ಮಳೆ. ಒಟ್ಟಿನಲ್ಲಿ ಇವೆಲ್ಲ ಸೇರಿ ಕಾಲ್ತುಳಿತ ಸಂಭವಿಸಿದ್ದು, ಅಮಾಯಕ ಅಭಿಮಾನಿಗಳ ಪ್ರಾಣಕ್ಕೆ ಬೆಲೆಯೇ ಇಲ್ಲ ಅನ್ನೋ ಭಾವನೆ ಮೂಡುವಂತಾಗಿದೆ. ಹಾಗಾದರೆ ಐಪಿಎಲ್ ಎಂದರೆ ಅಷ್ಟೊಂದು ಹುಚ್ಚು ಯಾಕೆ? ನಿಮ್ಮ ಸಿಟಿಯನ್ನು, ನಿಮ್ಮ ರಾಜ್ಯವನ್ನು ಈ ಐಪಿಎಲ್ ತಂಡಗಳು ರೆಪ್ರೆಸೆಂಟ್ ಮಾಡುತ್ತಾ? ನಿಜವಾಗಿಯೂ ಈ ಹುಚ್ಚು ಅಭಿಮಾನದ ಅಗತ್ಯವಿತ್ತಾ? ಇದರಲ್ಲಿ ಆಟ ಎಷ್ಟು, ಬಿಜಿನೆಸ್ ಎಷ್ಟು ಬನ್ನಿ ಒಂದೊಂದಾಗಿ ನೋಡೋಣ. ಇದ
ಐಪಿಎಲ್, 2008ರಲ್ಲಿ ಶುರುವಾದ ಒಂದು ಫ್ರಾಂಚೈಸಿಗಳ ಚುಟುಕು ಕ್ರಿಕೆಟ್ ಲೀಗ್. 20-20 Criket+Entertainment+Buisness ಅಂದ್ರೆ ಐಪಿಎಲ್. ಇದನ್ನು ಮುಂದೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಉದ್ಯಮಿ ಲಲಿತ್ ಮೋದಿ. ಇದನ್ನ ಅಮೇರಿಕಾದಲ್ಲಿ 90ರ ದಶಕದಲ್ಲಿ ಯಶಸ್ವಿ ಆಗಿದ್ದ sports league ಆದಂತಹ NBA, ಹಾಗೆಯೇ english Premiere league ಅಂತಹ ಪ್ರಾಂಚೈಸಿ based sports league ಮಾಡಬೇಕು ಎಂಬುದು ಲಿಲಿತ್ ಮೋದಿ ಕನಸಾಗಿತ್ತು . ಆದರೆ ಈ ಪ್ಲಾನ್ ಅನ್ನು ಲಲಿತ್ ಮೋದಿ 2008ಕ್ಕಿಂತ ಬಹಳ ಹಿಂದೆಯೇ ಬಿಸಿಸಿಐ ಮುಂದೆ ಇಟ್ಟಿದ್ದರು. 1995ರಲ್ಲಿ ಒಂದು 50 ಓವರ್ಗಳ ಲೀಗ್ ನ ಪ್ರಸ್ತಾವನೆಯನ್ನು ಬಿಸಿಸಿಐ ಮುಂದೆ ಇಟ್ಟಾಗ ಬಿಸಿಸಿಐ ಇದನ್ನ ಗಂಭೀರವಾಗಿ ಪರಿಗಣಿಸಲಿಲ್ಲ. ಆದರೆ ಲಲಿತ್ ಮೋದಿ ಅವರು ಪಟ್ಟು ಬಿಡದೆ 2007ರಲ್ಲಿ ಬಿಸಿಸಿಐ ಉಪಾಧ್ಯಕ್ಷರಾಗಿ, ಅದಾಗಲೇ ಟಿ-20 ವಿಶ್ವಕಪ್ ಗೆದ್ದ ಭಾರತದ popularity ಅನ್ನು ಬಳಸಿಕೊಂಡು 2008ರಲ್ಲಿ ಐಪಿಎಲ್ ಎಂಬ ಬೃಹತ್ ಕ್ರಿಡಾ ಪಂದ್ಯಾವಳಿಯನ್ನೇ ಸೃಷ್ಟಿ ಮಾಡುತ್ತಾರೆ. ಇಂದು ಈ ಲೀಗ್ ಎಷ್ಟು ಬಲಿಷ್ಠ ಆಗಿದೆ ಎಂದರೆ, ಐಪಿಎಲ್ ನಡೆಯುವ ಸಮಯದಲ್ಲಿ ಐಸಿಸಿ ಯಾವುದೇ ಇತರ ಇಂಪಾರ್ಟೆಂಟ್ ಸರಣಿ ಅಥವಾ ಟೂರ್ನಿಯನ್ನು ಆಯೋಜಿಸುವುದಿಲ್ಲ. ಕ್ರಿಕೆಟ್ ಆಡುವ ಯಾವುದೇ ದೇಶ ಸರಣಿಗಳನ್ನು ಆಡೋದಿಲ್ಲ. ಹಾಗೆ ಸರಣಿಯನ್ನು ಆಯೋಜನೆ ಮಾಡಿದರೂ, ಪ್ರಮುಖ ಆಟಗಾರರು ಐಪಿಎಲ್ ನಲ್ಲಿ ಆಡುವುದನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ಇದರ ಕ್ರೇಜ್ ಆ ರೀತಿಯಾಗಿ ಬದಲಾಗಿದೆ. ಆದರೆ ಸತ್ಯ ಏನೆಂಬುದು ಮುಂದೆ ನೋಡೋಣ.
ಐಪಿಎಲ್ ಎಂಬುದು ಮೂಲತ ಒಂದು ಬ್ಯುಸಿನೆಸ್, ಹಣದ ಹೊಳೆಯೇ ಈ ಪಂದ್ಯಾವಳಿಯ ಜೀವ. ಕೋಟಿಗಿಂತ ಕಡಿಮೆ ಮಾತು ಇಲ್ಲಿ ಬರೋದೇ ಇಲ್ಲ. ಇಲ್ಲಿ ಎಷ್ಟು ಹಣ ಗಳಿಕೆ ಆಗುತ್ತದೆ ಎಂಬ ಬಗ್ಗೆ ನಿಮಗೆ ಗೊತ್ತಾ? ಇವೆಲ್ಲವನ್ನೂ ನಿಯಂತ್ರಣ ಮಾಡುವ ಬಿಸಿಸಿಐ ಗೆ ಏನು ಲಾಭ ಇದರಿಂದ ಅಂತಾ ಗೊತ್ತಾ? ಇದನ್ನು ತಿಳಿಯೋಕೆ 2008ರ ಐಪಿಎಲ್ ಆವೃತ್ತಿ ಹಾಗೂ 2025ರ ಐಪಿಎಲ್ ಆವೃತ್ತಿಯನ್ನು ಹೋಲಿಕೆ ಮಾಡಿ ನೋಡೋಣ.
2008ರಲ್ಲಿ ಮೊದಲ ಆವೃತ್ತಿಯಲ್ಲಿ ಐಪಿಎಲ್ ನಿಂದ ಬಿಸಿಸಿಐ ಗಳಿಸಿದ ಆದಾಯ ಎಷ್ಟು ಅಂತಾ ನೋಡಿದ್ರೆ ನಮಗೆ ಸಿಗುವ ಮಾಹಿತಿ ಇಲ್ಲಿದೆ.
• ಮೀಡಿಯಾ ರೈಟ್ಸ್ – ಇದರ ಮೂಲಕ 486 ಕೋಟಿ ರೂಪಾಯಿ ಬಿಸಿಸಿಐ ಮಡಿಲಿಗೆ ಬಂದಿತ್ತು, ಇದು ಸಂಪೂರ್ಣ ಆದಾಯದ 75% ರಷ್ಟಿತ್ತು.
• Sponsership – Title and associate sponsorship ನಿಂದ 84 ಕೋಟಿ ರೂಪಾಯಿ ಬಂದಿತ್ತು. ಇದು ಸಂಪೂರ್ಣ ಆದಾಯದ 13% ಆಗಿತ್ತು.
• ಕೆಟಿಟ್ ಮೂಲಕ 150-200 ಕೋಟಿ ರೂಪಾಯಿ ಆದಾಯವನ್ನು ಬಿಸಿಸಿಐ ಪಡೆದಿತ್ತು.
• ಇನ್ನು ಫ್ರಾಂಚೈಸಿಗಳ ಶುಲ್ಕ ಒಟ್ಟು ಸೇರಿ 289 ಕೋಟಿ ರೂಪಾಯಿ ಬಿಸಿಸಿಐ ಜೇಬು ಸೇರಿತ್ತು.
ಎಲ್ಲ ಸೇರಿ 1000 ಕೋಟಿ ಅಂದ್ಕೊಳಬಹುದು.
ಹಾಗಾದರೆ ಪ್ರಸ್ತುತ ಎಷ್ಟು ಬೆಳೆದಿದೆ ಈ ಟೂರ್ನಮೆಂಟ್?
2025ರಲ್ಲಿ ಐಪಿಎಲ್ ಆದಾಯ ಒಟ್ಟು 16,000 ಕೋಟಿ ರೂಪಾಯಿಗೂ ಮೀರಿದೆ ಎಂದು ಅಂದಾಜಿಸಲಾಗಿದೆ. ಇದು NFL ನಂತರ ವಿಶ್ವದ ಎರಡನೇ ಅತ್ಯಂತ ಮೌಲ್ಯಯುತ ಕ್ರೀಡಾ ಲೀಗ್ ಆಗಿದೆ. BCCI ಯು ಈ ಆದಾಯದ ಶೇಕಡಾ 60% ರಷ್ಟನ್ನು ತನ್ನ ಖಾತೆಗೆ ಇರಿಸಿಕೊಂಡು, ಉಳಿದ 40% ರಷ್ಟನ್ನು 10 ಫ್ರಾಂಚೈಸಿಗಳಿಗೆ ಸಮಾನವಾಗಿ ವಿತರಿಸುತ್ತದೆ, ಇದರಿಂದ ಪ್ರತಿ ತಂಡಕ್ಕೆ ಸರಾಸರಿ ₹600 ಕೋಟಿ ವಾರ್ಷಿಕ ಆದಾಯವನ್ನು ಒದಗುತ್ತದೆ. 2025ರಲ್ಲಿ ಎಷ್ಟು ಆದಾಯ ಬಂತು ಬಿಸಿಸಿಐ ಗೆ ಅಂತಾ ನೋಡಿದ್ರೆ,
• ಮೀಡಿಯಾ ರೈಟ್ಸ್ ನಿಂದ 12000-13000 ಕೋಟಿ ರೂಪಾಯಿ ಆದಾಯ ಬಂದಿದ್ದು, ಸರಿಸುಮಾರು 70-75% ಆದಾಯ ಇದರಿಂದಲೇ ಬಂದಿದೆ.
• Advertisement ಮೂಲಕ 5300-5500 ಕೋಟಿ ರೂಪಾಯಿ ಬಂದಿದ್ದು, 30-35% ಆದಾಯ ಇದಾಗಿದೆ.
• ಟಿಕೆಟ್ ಮಾರಾಟದ ಮೂಲಕ 400-500 ಕೋಟಿ ರೂಪಾಯಿ ಬಿಸಿಸಿಐ ಗೆ ಬಂದಿದೆ
• ಹಾಗೂ ಇತರೆ ಆದಾಯಗಳು 300-400 ಕೋಟಿ ರೂಪಾಯಿ.
ನೋಡಿದ್ರಲ್ಲಾ ಸ್ನೇಹಿತರೆ, ಹಣದ ಹೊಳೆ ಹೇಗೆ ಐಪಿಎಲ್ ಮೂಲಕ ಹರಿಯುತ್ತಿದೆ ಎಂದು. ಐಪಿಎಲ್ ಪಂದ್ಯಾವಳಿಯ ಪ್ರೊಸಿಜರ್ ಕೂಡ ಒಮ್ಮೆ ಗಮನಿಸಿ. ದೇಶ ಮತ್ತು ವಿದೇಶದ ಕ್ರಿಕೆಟ್ ಆಟಗಾರರನ್ನು ಒಂದು ಹರಾಜು ಪ್ರಕ್ರಿಯೆ ಮೂಲಕ ವಿವಿಧ ಫ್ರಾಂಚೈಸಿಗಳು ಖರೀದಿ ಮಾಡುತ್ತಾರೆ. ಇಲ್ಲಿ ಬೆಂಗಳೂರಿನ ಅಥವಾ ಕರ್ನಾಟಕದ ಆಟಗಾರ ಗುಜರಾತ್ ತಂಡಕ್ಕೆ ಆಡಬಹುದು ಹಾಗೆ ದೆಹಲಿಯ ಆಟಗಾರ ಬೆಂಗಳೂರು ತಂಡಕ್ಕೆ ಆಡಬಹುದು. ಇವೆಲ್ಲವೂ ಫ್ರಾಂಚೈಸಿಗಳ ಮ್ಯಾನೇಜ್ಮೆಂಟ್ ಮತ್ತು ಓನರ್ ಗಳ ತೀರ್ಮಾನದಂತೆ ನಡೆಯುತ್ತದೆ. ಇದರಲ್ಲಿ ನೀವು ಒಂದನ್ನು ತಲೇಲಿ ಇಟ್ಟುಕೊಳ್ಳಬೇಕು,, ಅದು ಏನೆಂದರೆ, ಈ ತಂಡಗಳು ನಗರಗಳ ಹೆಸರಿನಲ್ಲಿ ಫ್ರಾಂಚೈಸಿಗಾಗಿ ಆಡುತ್ತವೆ ಹೊರತು, ಇವುಗಳು ನಿಮ್ಮ ಸಿಟಿಗಳನ್ನು ಅಥವಾ ನಿಮ್ಮ ರಾಜ್ಯಗಳನ್ನು ಪ್ರತಿನಿಧಿಸುವುದಿಲ್ಲ. ನಿಜವಾಗಿಯೂ ನಿಮ್ಮ ರಾಜ್ಯವನ್ನು ಪ್ರತಿನಿಧಿಸುವ ಕ್ರಿಕೆಟ್ ತಂಡ ಎಂದರೆ ಅದು ರಣಜಿ ಕ್ರಿಕೆಟ್ ತಂಡಗಳು. ಮೀಡಿಯಾಗಳು ಈ ಪಂದ್ಯಾವಳಿಗಳನ್ನು ಕಡಿಮೆ ಕಾಣಿಸಿ, ಐಪಿಎಲ್ ಅನ್ನು ಹೆಚ್ಚು ಹೈಪ್ ಮಾಡಿ ಕಾಣಿಸುವುದರಿಂದ ಯುವಕರು ಅತಿ ಹೆಚ್ಚು ಐಪಿಎಲ್ ಅತ್ತ ಸಾಗುತ್ತಿದ್ದಾರೆ. ಅಷ್ಟೇ ಅಲ್ಲದೆ ಈ ತಂಡಗಳ ಸಾಮಾಜಿಕ ಮಾಧ್ಯಮಗಳು ಸ್ಥಳೀಯ ಸಂಸ್ಕ್ರತಿಯನ್ನು ಎತ್ತಿ ಮಾತನಾಡಿ, ಇದೊಂದು ಸಿಟಿಗೆ ಅಥವಾ ರಾಜ್ಯಕ್ಕೆ ಸೇರಿದ ತಂಡ ಎಂಬಂತೆ ಬಿಂಬಿಸುತ್ತಾರೆ. ಇದೂ ಕೂಡ ಇದು ತಮ್ಮದೇ ರಾಜ್ಯದ ತಂಡ, ಇದು ಅವರ ರಾಜ್ಯದ ತಂಡ ಎಂಬ ಕಲ್ಪನೆಯಲ್ಲಿ ಜನರು ಇದ್ದಾರೆ. ಕುರಿ ಹಿಂಡಿನಂತೆ ಕೊಳ್ಳಲ್ಪಡುವ ಆಟಗಾರರು, ಫಿಕ್ಸಿಂಗ್ ಆದ ಮ್ಯಾಚ್ ಗಳು, ಹಣದ ಹೊಳೆ, ಇವೆಲ್ಲಾ ಐಪಿಎಲ್ ನ ಇನ್ನೊಂದು ಮುಖ. ಹಾಗಾದರೆ ಇದಕ್ಕೆ ಕಾರಣ ಸಾಕ್ಷಿ ಇದೆಯಾ? ಎಂದು ನೀವು ಕೇಳಿದರೆ, ಕೇಳಿ ಇಲ್ಲಿ.
ಐಪಿಎಲ್ ನಿಯಂತ್ರಣ ಮಾಡುವ ಬಿಸಿಸಿಐ ಮ್ಯಾಚ್ ಫಿಕ್ಸಿಂಗ್ ಪ್ರಕರಣದ ವಿವಾದಗಳನ್ನು ಎದುರಿಸಬೇಕಾಯಿತು. ಮ್ಯಾಚ್ ಫಿಕ್ಸಿಂಗ್ ಪ್ರಕರಣ ಗಳಲ್ಲಿಯೇ ಅತಿ ದೊಡ್ಡ ವಿವಾದ ಆಗಿದ್ದು 2013ರ ಐಪಿಎಲ್ ಆವೃತ್ತಿ. ಈ ಪ್ರಕರಣದಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಆಟಗಾರರಾದ ಎಸ್. ಶ್ರೀಶಾಂತ್, ಅಜಿತ್ ಚಂಡೀಲಾ, ಅಂಕಿತ್ ಚೌವ್ಹಾಣ್, ಚೆನ್ನೈ ಸೂಪರ್ ಕಿಂಗ್ಸ್ ಮಾಲೀಕ ಗುರುನಾಥ್ ಮೇಯಪ್ಪನ್, ರಾಜಸ್ಥಾನ ರಾಯಲ್ಸ್ ಸಹ ಮಾಲೀಕ ರಾಜ್ ಕುಂದ್ರಾ ತಪ್ಪಿತಸ್ಥರು ಎಂದು ಲೋಧಾ ಕಮಿಟಿ ಹೇಳಿತ್ತು. ಇದರೊಂದಿಗೆ ರಾಜಸ್ಥಾನ ರಾಯಲ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಎರಡು ವರ್ಷಗಳ ಕಾಲ, ಅಂದ್ರೆ 2016-2017ರಲ್ಲಿ ಬ್ಯಾನ್ ಆಗಿದ್ದವು ಈ ಎಲ್ಲಾ ಪ್ರಕರಣದ ಹಿಂದೆ ಅಂದಿನ ಬಿಸಿಸಿಐ ಅಧ್ಯಕ್ಷ ಎನ್ ಶ್ರೀನಿವಾಸನ್ ಹೆಸರು ಕೂಡ ಸೇರಿಕೊಂಡಿತ್ತು. ಇದು ಅವರನ್ನು ತಮ್ಮ ಸ್ಥಾನದಿಂದ ಕೆಳಗೆ ಇಳಿಯುವಂತೆ ಕೂಡ ಮಾಡಿತು.
ಇದರೊಂದಿಗೆ ಬಿಸಿಸಿಐ ಪ್ರಸ್ತುತ ಅಂದ್ರೆ 2025ರಲ್ಲಿ ಆನ್ಲೈನ್ ಬೆಟ್ಟಿಂಗ್ ಮತ್ತು ಫ್ಯಾಂಟಸಿ ಗೇಮಿಂಗ್ ಅಪ್ಲಿಕೇಶನ್ಗಳಿಗೆ ಸಂಬಂಧಿಸಿದ ಆರೋಪಗಳನ್ನು ಎದುರಿಸುತ್ತಿದೆ. ಅದು ಏನೆಂದರೆ, ಬಿಸಿಸಿಐ ನಡೆಸಿಕೊಡುವ ಐಪಿಎಲ್ ಮ್ಯಾಚ್ ಪ್ರಸಾರ ಆಗುವ ಸಂದರ್ಭದಲ್ಲಿ ನೀವು ನೋಡಿರಬಹುದು. ಮೂರು ಕೋಟಿ ಗೆಲ್ಲಿ, ಐದು ಕೋಟಿ ಗೆಲ್ಲಿ ಅಂತಾ ಬಣ್ಣಬಣ್ಣದ ಕಾಗೆಗಳನ್ನು ಹಾರಿಸುವುದನ್ನು ನೋಡಿರಬಹುದು ನೀವು. ಅದರಲ್ಲೂ ಈ ಜಾಹೀರಾತುಗಳನ್ನು ಕ್ರಿಕೆಟ್ ದಿಗ್ಗಜರೇ ನಡೆಸಿಕೊಡುವುದು ನಾಚಿಕೆಗೇಡಿನ ವಿಷಯ. ಇವುಗಳು ಯುವಕರಿಗೆ ಆಕರ್ಷಿಸುತ್ತಿದ್ದು, ಯುವಕರಿಗೆ ಇದೊಂದು ರೀತಿಯಲ್ಲಿ ಚಟವಾಗಿ ಪರಿಣಮಿಸಿದೆ. ಇದರ ಹಿಂದೆ ಬಿಸಿಸಿಐ ಪರೋಕ್ಷವಾಗಿ ಬೆಂಬಲಿಸುತ್ತಿದೆ ಎಂಬುದು ಅನೇಕ ಪೋಷಕರು ಕೂಡ ಆರೋಪ.
ಇದರೊಂದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮೊದಲಿನ ಮಾಲಿಕ ವಿಜಯ್ ಮಲ್ಯ ಹಾಗೂ ಐಪಿಎಲ್ ಶುರು ಮಾಡಿದ ಲಲಿತ್ ಮೋದಿ ಈ ಇಬ್ಬರು ಈಗ ಭಾರತದಲ್ಲಿ ಇಲ್ಲ. ಎಲ್ಲಿದಾರೆ ಹೇಳಿ. ಇಬ್ಬರೂ ಲಂಡನ್ ನಲ್ಲಿ ಇದಾರೆ. ಯಾಕೆ ಹಣಕಾಸಿನ ಅವ್ಯವಹಾರಕ್ಕೆ ಸಂಬಂಧಪಟ್ಟಂತೆ. ಲಲಿತ್ ಮೋದಿ ನೇರವಾಗಿ ಐಪಿಎಲ್ ನ ಅವ್ಯವಹಾರಕ್ಕೆ ಸಂಬಂಧಪಟ್ಟಂತೆ ಆರೋಪಿ. ಐಪಿಎಲ್ ಚೇರಮನ್ ಆಗಿದ್ದ ಸಂದರ್ಭದಲ್ಲಿ 2009ರ ಐಪಿಎಲ್ ಪಂದ್ಯಾವಳಿಗೆ ಮುನ್ನ ಆರ್ಬಿಐನ ಅನುಮತಿ ಪಡೆಯದೇ 243 ಕೋಟಿ ರೂಪಾಯಿಗಳನ್ನ ದಕ್ಷಿಣ ಆಫ್ರಿಕಾ ಕ್ರಿಕೆಟ್ ಸಂಸ್ಥೆಗೆ ವರ್ಗಾಯಿಸಿದ ಆರೋಪಕ್ಕೆ ಗುರಿಯಾಗಿದಾರೆ. ಇದು ಫೆಮಾ ನಿಯಮಗಳ ಉಲ್ಲಂಘನೆಯೂ ಆಗಿತ್ತು. Foreign Exchange Management Act, 1999. ಇನ್ನು ವಿಜಯ್ ಮಲ್ಯ ಭಾರತದ ಬ್ಯಾಂಕ್ ಗಳಿಗೆ ಮೋಸ ಮಾಡಿದ ಆರೋಪದಲ್ಲಿ ಭಾರತದಿಂದ ಓಡಿ ಹೋಗಿದಾರೆ. ಅವರ ಮೇಲೆ 9000 ಕೋಟಿ ರೂಪಾಯಿಗಳ ಅವ್ಯವಹಾರದ ಆರೋಪ ಇದೆ. ಯೋಚ್ನೆ ಮಾಡಿ. ನಮಗೆ ನಿಮಗೆ ಕ್ರಿಕೆಟ್ ಅನ್ನೋದು ಒಂದು ಆಟ. ಆಟಗಾರರನನ್ನ ದೇವರ ಥರ ನೋಡ್ತಿವಿ. ಆದರೆ ಇದರ ಹಿಂದೆ ಒಂದು ಪಕ್ಕಾ ಬಿಜಿನೆಸ್ ಇದೆ. ಆರ್ಸಿಬಿಯಲ್ಲಿ ಕರ್ನಾಟಕ ಇದೆಯಾ ಇಲ್ಲ. ಕನ್ನಡದ ಆಟಗಾರರು ಇದಾರೆ ಇಲ್ಲ. ಕರ್ನಾಟಕ ಸರ್ಕಾರ ಇದೆಯಾ ಇಲ್ಲ. ಇರೋದು ಬರೀ ಬೆಂಗಳೂರು ಮಾತ್ರ.
ಹಾಗಾಗಿ ಅಭಿಮಾನಿಗಳು, ಅದರಲ್ಲೂ ಯುವ ಅಭಿಮಾನಿಗಳು, ತಮ್ಮ ನೆಚ್ಚಿನ ಆಟಗಾರರನ್ನು, ತಮ್ಮ ನೆಚ್ಚಿನ ತಂಡವನ್ನು ಹೃದಯಪೂರ್ವಕವಾಗಿ ಬೆಂಬಲಿಸಿ, ಯಾವುದೇ ತೊಂದರೆ ಇಲ್ಲ. ಆದರೆ ಅದಕ್ಕಿಂತ ಹೆಚ್ಚು, ನಿಮ್ಮ ಜೀವ ಹಾಗೂ ಜೀವನ ನಿಮಗೆ ಬೇರೆ ಯಾರೂ ತಂದು ಕೊಡಲು ಸಾಧ್ಯ ಇಲ್ಲ. ಇಂದು ಸರ್ಕಾರ ಯಾರಿಂದ ತಪ್ಪಾಗಿದೆ ಎಂದು ಹುಡುಕುತ್ತಿದೆ, ಆದರೆ ಹೋದ ಜೀವಗಳನ್ನು ಯಾರೂ ಪುನಃ ತರಲು ಸಾಧ್ಯವಿಲ್ಲ. ರೀಲ್ ಮತ್ತು ರಿಯಲ್ ಮಧ್ಯೆ ವ್ಯತ್ಯಾಸ ತಿಳಿಯಿರಿ. ಇದು ನಮ್ಮ ಅಭಿಪ್ರಾಯ. ಇದಕ್ಕೆ ನಿಮ್ಮ ಅನಿಸಿಕೆ ಏನು ಎಂಬುದನ್ನು ಕಾಮೆಂಟ್ ಮಾಡಿ ತಿಳಿಸಿ.